ಯಕ್ಷಗಾನ ಪರಿಪೂರ್ಣ ಕಲೆ: ಶ್ರೀನಿವಾಸ ಕಪ್ಪಣ್ಣ
ಲೇಖಕರು : ಕನ್ನಡಪ್ರಭ
ಮ೦ಗಳವಾರ, ಜನವರಿ 21 , 2014
|
ಇಡೀ ಕರ್ನಾಟದಲ್ಲಿ ಪರಿಪೂರ್ಣವಾದ ಕಲೆ ಯಕ್ಷಗಾನ ಮಾತ್ರ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅಭಿಪ್ರಾಯಪಟ್ಟರು.
ಅವರು ಸೋಮವಾರ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಏರ್ಪಡಿಸಿದ ಐದು ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಮೂರನೇ ದಿನದ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಭೆಯನ್ನಾಧರಿಸಿ ಕಲೆ, ಕಲಾವಿದ ಬೆಳೆಯುತ್ತಾನೆ. ಆದರಿಂದ ಬಹುತೇಕ ಯಕ್ಷಗಾನ ಮೇಳಗಳು ದೇವಸ್ಥಾನದ ಆಶ್ರಯದಲ್ಲಿದ್ದು, ದೇವಳದ ಆಡಳಿತ ಮಂಡಳಿಯ ನಿಯಂತ್ರಣದಲ್ಲಿದೆ. ಇಂತಹ ಮೇಳಗಳ ಪ್ರದರ್ಶನಗಳು ಹರಕೆಯ ರೂಪದಲ್ಲಿ ನಡೆಯುತ್ತಿವೆಯೇ ಹೊರತೂ ಕಲಾವಿದನ ಪ್ರತಿಭೆಯನ್ನಾಧರಿಸಿ ನಡೆಯುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ ಎಂದರು.
ಕಷ್ಟದಲ್ಲಿರುವವರು ಹೊತ್ತ ಹರಕೆಯ ರೂಪದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳಲ್ಲಿ ಪ್ರತಿಭೆಯ ಅಭಿವ್ಯಕ್ತಿಗೆ ಅವಕಾಶದ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇಂತಹ ಪ್ರದರ್ಶನದಲ್ಲಿ ಹೊಸ ಹೊಸ ಕಲಾಪ್ರತಿಭೆಗಳ ಬೆಳವಣಿಗೆಗೆ ಅವಕಾಶವಿರಲಾರದು.
ಈ ಹಿಂದೆ ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಮೇಳಗಳಿಗೆ ಬೇಡಿಕೆ ಇರುತ್ತಿದ್ದವು. ಹೀಗೆ ಪ್ರತಿಭೆ ಆಧರಿಸಿ ಕಲೆ, ಕಲಾವಿದ ಬೆಳೆಯುವಂತಾಗಬೇಕು. ಹೀಗೆ ದೇವಾಲಯಗಳ ಚೌಕಟ್ಟಿನಿಂದ ಹೊರಬಂದು ಬಹುಬೇಡಿಕೆ ಪಡೆದುಕೊಂಡ ಮೇಳವಿದ್ದರೆ ಅದು ಶಿವಾನಂದ ಹೆಗಡೆಯವರ ಕೆರೆಮನೆ ಮೇಳ ಮಾತ್ರ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಎ.ಜಿ. ಕೊಡ್ಗಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದ ಕಲೆ ಯಕ್ಷಗಾನ. ಎಲ್ಲ ಕಲೆಯನ್ನು ತನ್ನೊಳಗೆ ಸಮ್ಮಿಳಿತಗೊಂಡ ಸಮಗ್ರಕಲೆ ಯಕ್ಷಗಾನ. ಈ ಕಲೆ ತನ್ನ ಪಾರಂಪರಿಕ ಚೌಕಟ್ಟು ಮೀರದೇ ಮುಂದುವರಿಯಬೇಕಿದೆ. ಈ ದಿನಗಳಲ್ಲಿ ಸಾಂಸ್ಕೃತಿಕ ಪರಂಪರೆ ಉಳಿಸಿಕೊಂಡು ಚೌಕಟ್ಟು ಮೀರದೇ ಪ್ರದರ್ಶನ ನೀಡುತ್ತಿರುವ ಕೆರೆಮನೆ ಮೇಳದ ಕೊಡುಗೆ ಅನನ್ಯ ಎಂದರು.
ಐಎಎಸ್ ನಿವೃತ್ತ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿ ಮಾತನಾಡಿ, ನಾಟಕ ರಂಗಭೂಮಿಗೆ ಹೆಗ್ಗೋಡು ನೀನಾಸಂ ಸಂಸ್ಥೆ ಹೆಗ್ಗುರುತಾದಂತೆ ಯಕ್ಷಗಾನ ಕಲೆಗೆ ಕೆರೆಮನೆ ಹೆಗ್ಗುರುತಾಗಿದೆ. ಇಂದು ಯಕ್ಷಗಾನ ಕಲೆಯ ಜತೆಜತೆಗೆ ರಾಷ್ಟ್ರೀಯ ನಾಟ್ಯೋತ್ಸವದ ಮೂಲಕ ಇಡೀ ರಾಷ್ಟ್ರದ ಕಲಾವಿದರಿಗೆ, ಕಲೆಗೆ ಈ ಯಕ್ಷಾಂಗಣ ತೆರೆದುಕೊಂಡಿದ್ದು, ಈ ನಿಟ್ಟಿನಲ್ಲಿ ಶಿವಾನಂದ ಹೆಗಡೆ ಅವರ ಕೃತುಶಕ್ತಿ ಪ್ರಶಂಸನಾರ್ಹ ಎಂದು ಹೇಳಿದರು.
ಕೊಲ್ಲೂರು ದೇವಳದ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಪತ್ರಕರ್ತ ತಿಲಕನಾಥ ಮಂಜೇಶ್ವರ, ಸಾಹಿತಿ ಡಾ. ಸಯ್ಯದ್ ಜಮೀರುಲ್ಲಾ ಷರೀಫ್, ಸಾಹಿತಿ ಟಿ.ಎಂ. ಸುಬ್ಬರಾಯ್, ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಪ್ರಾಧ್ಯಾಪಕ ಆದಿತ್ಯ ಭಟ್ಟ ಮಾತನಾಡಿದರು.
ಯಕ್ಷಗಾನ ಕಲಾವಿದ ಮಾರ್ಗೋಳಿ ಗೋವಿಂದ ಶೇರಿಗಾರ್, ತಾಳಮದ್ದಳೆ ಕಲಾವಿದ ಎಂ.ಆರ್. ಲಕ್ಷ್ಮೀನಾರಾಯಣ ಅಮಚಿ, ಯಕ್ಷಗಾನ ಗುರು ಹೊಸ್ತೋಟ ಗಜಾನನ ಭಟ್ಟ, ಸಂಘಟಕ ಚಂದ್ರಶೇಖರ ಅಡಿಗ ಭಟ್ಕಳ, ಮುರ್ಡೇಶ್ವರ ಯಕ್ಷರಕ್ಷೆ ಅಧ್ಯಕ್ಷ ಡಾ. ಐ.ಆರ್. ಭಟ್ಟ ಅವರಿಗೆ ನಾಟ್ಯೋತ್ಸವ ಸಮ್ಮಾನ ನೀಡಲಾಯಿತು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ಕೃತಜ್ಞತೆ ಹೇಳಿದರು. ಪ್ರಾಚಾರ್ಯ ಎಸ್.ಜಿ. ಭಟ್ಟ ಸನ್ಮಾನಿತರನ್ನು ಅಭಿನಂದಿಸಿದರು. ತರುವಾಯ ಸಂತೂರ್ ವಾದನ, ಗ್ಲೋ ಆಟ್, ಕಥಕ್ ನೃತ್ಯ ಪ್ರದರ್ಶನಗೊಂಡವು.
ಕೃಪೆ :
http://www.kannadaprabha.com
|
|
|